ನಟಿ ರೈಮಾ ಇಸ್ಲಾಂ ಶೀಮು ಅವರ ಕೊಲೆ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. 2022ರ ಜನವರಿ 16ರಂದು ಬೆಳಗ್ಗೆ ಶೂಟಿಂಗ್ಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ನಟಿ ನಾಪತ್ತೆಯಾಗಿದ್ದರು. ಸುಮಾರು 24 ಗಂಟೆಗಳ ಬಳಿಕ ಬಾಂಗ್ಲಾದೇಶದ ಢಾಕಾ ಹೊರವಲಯದ ಹಜ್ರತ್ಪುರ ಸೇತುವೆ ಸಮೀಪದ ಪೊದೆಗಳಲ್ಲಿ ಚೀಲವೊಂದರೊಳಗೆ ಅವರ ಮೃತದೇಹ ಎರಡು ತುಂಡುಗಳಾಗಿ ಪತ್ತೆಯಾಗಿತ್ತು.
ಇದೀಗ ಈ ರೋಚಕ ಕೊಲೆ ರಹಸ್ಯ ಬಯಲಾಗಿದ್ದು ಹಳೇ ವೈಮನಸ್ಯ ಕಾರಣ ಎಂದು ಹೇಳಲಾಗಿದೆ.
ನಾಪತ್ತೆ ಪ್ರಕರಣವಾಗಿ ಆರಂಭವಾದ ತನಿಖೆ ಬಳಿಕ ಕೊಲೆ ಪ್ರಕರಣವಾಗಿ ಬದಲಾಗಿದ್ದು, ತನಿಖೆಯ ವೇಳೆ ನಟಿಯ ಪತಿ ಶಖಾವತ್ ಅಲಿ ನೋಬೆಲ್ ಸೇರಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ರೈಮಾ ಇಸ್ಲಾಂ ಶೀಮು ಅವರು ರಂಗಭೂಮಿಯ ಮೂಲಕ ಕಲಾ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. ಬಳಿಕ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಕಾಜಿ ಹಯಾತ್ ಅವರ ಗಮನ ಸೆಳೆದ ಅವರು, 1998ರಲ್ಲಿ ಬಿಡುಗಡೆಯಾದ ‘ಬರ್ತಮಾನ್’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಅವರು ಸುಮಾರು 50 ನಾಟಕಗಳಲ್ಲಿ ಅಭಿನಯಿಸಿದ್ದರು. ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಢಾಕಾದ ಉದ್ಯಮಿ ಶಖಾವತ್ ಅಲಿ ನೋಬೆಲ್ ಅವರನ್ನು ಭೇಟಿಯಾದ ಶೀಮು, 2004ರಲ್ಲಿ ಅವರನ್ನು ವಿವಾಹವಾಗಿದ್ದರು. ಮದುವೆಯ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದರೂ ದೂರದರ್ಶನ ಕ್ಷೇತ್ರದಲ್ಲಿ ಮುಂದುವರಿದಿದ್ದರು. ನಂತರ ಹಲವು ಕಾರ್ಯಕ್ರಮಗಳನ್ನು ನಿರ್ಮಿಸಿದ್ದ ಅವರು ತಮ್ಮದೇ ನಿರ್ಮಾಣ ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಖಾಸಗಿ ಟಿವಿ ವಾಹಿನಿಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿಯೂ ಕೆಲಸ ಮಾಡಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು.
2022ರ ಜನವರಿ 16 ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ ಶೀಮು ಶೂಟಿಂಗ್ಗೆ ತೆರಳಿದ್ದಾರೆ ಎಂದು ಪತಿ ಶಖಾವತ್ ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ಅವರು ಶೂಟಿಂಗ್ ಸ್ಥಳಕ್ಕೆ ತಲುಪಿರಲಿಲ್ಲ. ನಟಿಯ ಸಹೋದರಿ ಫಾತಿಮಾ ನಿಶಾ ಹಲವು ಬಾರಿ ಕರೆ ಮಾಡಿದರೂ ಶೀಮು ಫೋನ್ ಸ್ವೀಕರಿಸಿರಲಿಲ್ಲ. ಮರುದಿನ ಬೆಳಗ್ಗೆ ಅವರು ಪೊಲೀಸರಿಗೆ ನಾಪತ್ತೆ ದೂರು ನೀಡಿದರು. ಬಳಿಕ ಶಖಾವತ್ ಕೂಡ ಕಲಾಬಾಗನ್ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಇತ್ತ ಢಾಕಾದ ಹೊರವಲಯದ ಕೆರಾನಿಗಂಜ್ನ ಹಜ್ರತ್ಪುರ ಸೇತುವೆ ಸಮೀಪ ಪೊದೆಗಳಲ್ಲಿ ಅನುಮಾನಾಸ್ಪದ ಚೀಲವೊಂದು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದರು. ಪೊಲೀಸರು ಸ್ಥಳಕ್ಕೆ ತೆರಳಿ ಚೀಲ ತೆರೆದಾಗ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಶವವನ್ನು ಎರಡು ತುಂಡುಗಳಾಗಿ ಮಾಡಲಾಗಿತ್ತು ಹಾಗೂ ದೇಹದ ಮೇಲೆ ಹಲವು ಗಾಯಗಳಿದ್ದವು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಿಟ್ಫೋರ್ಡ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ನಟಿಯ ಸಹೋದರ ಶಾಹಿದುಲ್ ಇಸ್ಲಾಂ ಮೃತದೇಹವನ್ನು ಗುರುತಿಸಿದ್ದರು.
ಆರಂಭಿಕ ತನಿಖೆಯಲ್ಲಿ ಬಾಂಗ್ಲಾದೇಶದ ನಟ ಜಾಯೆದ್ ಖಾನ್ ಅವರ ಹೆಸರೂ ಕೇಳಿಬಂದಿತ್ತು. ಚಿತ್ರ ಕಲಾವಿದರ ಸಂಘದ ಸದಸ್ಯತ್ವದ ವಿಚಾರದಲ್ಲಿ ಕೆಲವು ವರ್ಷಗಳ ಹಿಂದೆ ಶೀಮು ಮತ್ತು ಜಾಯೆದ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಜಾಯೆದ್ ಅವರನ್ನು ವಿಚಾರಣೆ ನಡೆಸಿದರು. ಆದರೆ ಶೀಮು ಅವರೊಂದಿಗೆ ಸುಮಾರು ಎರಡು ವರ್ಷಗಳಿಂದ ಯಾವುದೇ ಸಂಪರ್ಕವಿರಲಿಲ್ಲ ಎಂದು ಅವರು ತಿಳಿಸಿದ್ದರು. ಹೀಗಾಗಿ ಆ ತನಿಖಾ ದಿಕ್ಕಿನಲ್ಲಿ ಪೊಲೀಸರಿಗೆ ಹೆಚ್ಚಿನ ಸುಳಿವು ಸಿಗಲಿಲ್ಲ.
ನಟಿ ಮತ್ತು ಅವರ ಪತಿ ಇಬ್ಬರೂ ಬಳಸುತ್ತಿದ್ದ ಕಾರಿನ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಕಾರನ್ನು ಪರಿಶೀಲಿಸಿದಾಗ ಅದರೊಳಗೆ ಬ್ಲೀಚಿಂಗ್ ಪೌಡರ್ನ ತೀವ್ರ ವಾಸನೆ ಬಂದಿತ್ತು. ಸಾಕ್ಷ್ಯಗಳನ್ನು ಅಳಿಸಲು ಅಥವಾ ಕಾರನ್ನು ಸ್ವಚ್ಛಗೊಳಿಸಲು ಅದನ್ನು ಬಳಸಿರಬಹುದು ಎಂದು ಪೊಲೀಸರು ಶಂಕಿಸಿದರು.
ಕಾರಿನಲ್ಲಿ ನೈಲಾನ್ ಹಗ್ಗದ ಕಟ್ಟು ಕೂಡ ಪತ್ತೆಯಾಯಿತು. ನಟಿಯ ಮೃತದೇಹವಿದ್ದ ಚೀಲವನ್ನೂ ಇದೇ ರೀತಿಯ ನೈಲಾನ್ ಹಗ್ಗದಿಂದ ಹೊಲಿದು ಕಟ್ಟಲಾಗಿತ್ತು. ಇದರಿಂದ ಮೃತದೇಹವನ್ನು ಕುಟುಂಬದ ಕಾರಿನಲ್ಲೇ ಸಾಗಿಸಲಾಗಿತ್ತೇ ಎಂಬ ಅನುಮಾನ ಮತ್ತಷ್ಟು ಬಲವಾಯಿತು. ತನಿಖೆಯ ಭಾಗವಾಗಿ ಶಖಾವತ್ ಅಲಿ ಹಾಗೂ ಅವರ ಸ್ನೇಹಿತ ಎಸ್ಎಂವೈ ಅಬ್ದುಲ್ಲಾ ಫರ್ಹಾದ್ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಶಖಾವತ್ ವಿವಿಧ ರೀತಿಯ ಹೇಳಿಕೆಗಳನ್ನು ನೀಡಿದ್ದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಪೊಲೀಸರ ಪ್ರಕಾರ, ಅವರು ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.
ಪೊಲೀಸರ ತನಿಖೆಯ ಪ್ರಕಾರ, ಜನವರಿ 16ರ ಬೆಳಗ್ಗೆ ಶೀಮು ಮತ್ತು ಶಖಾವತ್ ನಡುವೆ ಜಗಳ ನಡೆದಿತ್ತು. ಈ ಸಂದರ್ಭದಲ್ಲಿ ಶಖಾವತ್ ಪತ್ನಿಯ ಮೇಲೆ ಹಲ್ಲೆ ನಡೆಸಿ ಬಳಿಕ ಕತ್ತು ಹಿಸುಕಿದ್ದರು. ನಂತರ ಸ್ನೇಹಿತ ಫರ್ಹಾದ್ ಅವರನ್ನು ಮನೆಗೆ ಕರೆಸಿಕೊಂಡು ಘಟನೆ ಬಗ್ಗೆ ತಿಳಿಸಿದ್ದರು. ಪೊಲೀಸರಿಗೆ ಮಾಹಿತಿ ನೀಡುವ ಬದಲು ಮೃತದೇಹವನ್ನು ವಿಲೇವಾರಿ ಮಾಡಲು ಫರ್ಹಾದ್ ಸಹಾಯ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಮನೆಯ ಕೆಲಸದಾಳು ಕೂಡ ಆ ಸಮಯದಲ್ಲಿ ಮನೆಯಲ್ಲಿದ್ದ. ಆತನನ್ನು ಉಪಾಹಾರ ತರಲು ಹೊರಗೆ ಕಳುಹಿಸಿದ ಬಳಿಕ ಇಬ್ಬರೂ ಸೇರಿ ಮೃತದೇಹವನ್ನು ತುಂಡುಗಳಾಗಿ ಮಾಡಿ ಚೀಲದಲ್ಲಿ ಇರಿಸಿ, ನೈಲಾನ್ ಹಗ್ಗದಿಂದ ಚೀಲವನ್ನು ಹೊಲಿದು ಮುಚ್ಚಿದ್ದರು. ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡು ಅದೇ ದಿನ ಮಧ್ಯಾಹ್ನ ಶಖಾವತ್ ಮತ್ತು ಫರ್ಹಾದ್ ಹೊರಟಿದ್ದರು. ಆದರೆ ಬೆಳಕಿದ್ದ ಕಾರಣ ಜನರ ಕಣ್ಣಿಗೆ ಬೀಳುವ ಭಯದಿಂದ ಅವರು ವಾಪಸ್ ಮನೆಗೆ ಬಂದಿದ್ದರು. ಅದೇ ದಿನ ರಾತ್ರಿ ಸುಮಾರು 9 ಗಂಟೆಗೆ ಮತ್ತೆ ಕಾರಿನಲ್ಲಿ ಹೊರಟು ಕೆರಾನಿಗಂಜ್ ಕಡೆ ತೆರಳಿದ್ದರು. ಹಜ್ರತ್ಪುರ ಸೇತುವೆಯಿಂದ ಸುಮಾರು 300 ಮೀಟರ್ ದೂರದಲ್ಲಿರುವ ನಿರ್ಜನ ಪ್ರದೇಶದ ಪೊದೆಗಳಲ್ಲಿ ಚೀಲವನ್ನು ಎಸೆದು ವಾಪಸ್ ಢಾಕಾಗೆ ಬಂದಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಮರುದಿನ ಬೆಳಗ್ಗೆ ಶಖಾವತ್ ಪೊಲೀಸ್ ಠಾಣೆಗೆ ತೆರಳಿ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಆದರೆ ಅಷ್ಟರಲ್ಲಾಗಲೇ ಸ್ಥಳೀಯರು ಚೀಲವನ್ನು ಪತ್ತೆಹಚ್ಚಿದ್ದರು.
ತನಿಖೆಯ ವೇಳೆ ದಂಪತಿಯ ವೈವಾಹಿಕ ಜೀವನದ ಬಗ್ಗೆ ಹಲವು ಆರೋಪಗಳು ಹೊರಬಂದಿದ್ದವು. ಶಖಾವತ್ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಪತ್ನಿಯ ಮೇಲೆ ಅನುಮಾನಪಡುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪತ್ನಿಗೆ ಬೇರೊಬ್ಬರೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ಹಲ್ಲೆ ನಡೆಸುತ್ತಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿತ್ತು. ಶೀಮು ಅವರ ಟಿವಿ ಕೆಲಸ ಸ್ಥಗಿತಗೊಂಡಿದ್ದರೆ, ಶಖಾವತ್ ಅವರ ವ್ಯವಹಾರಕ್ಕೂ ನಷ್ಟವಾಗಿತ್ತು. ಬಳಿಕ ಕೆಲಸ ಪುನರಾರಂಭವಾದಾಗ ಕುಟುಂಬದ ಪ್ರಮುಖ ಆದಾಯದ ಮೂಲವಾಗಿ ಶೀಮು ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಕೊಲೆಗೆ ಕೆಲವು ತಿಂಗಳುಗಳ ಮುನ್ನ ಶೀಮು ತಮ್ಮ ಪತಿಯ ವಿರುದ್ಧ ಕೌಟುಂಬಿಕ ಹಿಂಸಾಚಾರದ ದೂರು ನೀಡಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿತ್ತು.
ಕೆಲ ದಿನಗಳ ಬಳಿಕ ಪೊಲೀಸರು ಶೀಮು ಮತ್ತು ಶಖಾವತ್ ಅವರ ಪುತ್ರಿ ಓಜಿಯಾ ಅಲೀಮ್ ರಿಡ್ ಅವರನ್ನು ವಿಚಾರಣೆ ನಡೆಸಿದ್ದರು. ತಂದೆ ತಮ್ಮ ತಾಯಿಯ ಮೇಲೆ ಆಗಾಗ್ಗೆ ಹಲ್ಲೆ ನಡೆಸುತ್ತಿದ್ದರು. ಪೊಲೀಸರ ವಶದಲ್ಲಿದ್ದಾಗ ಶಖಾವತ್ ಪುತ್ರಿಗೆ ಕರೆ ಮಾಡಿ ತಾಯಿಯನ್ನು ಕೊಂದಿದ್ದಕ್ಕಾಗಿ ಕ್ಷಮೆ ಕೇಳಿದ್ದರು ಎಂದು ಪುತ್ರಿಯ ಹೇಳಿಕೆಯನ್ನು ಆಧರಿಸಿ ವರದಿಯಾಗಿದೆ.
ನಟಿಯ ನಾಪತ್ತೆಯ ಕಥೆಯನ್ನು ನಂಬಿಸುವ ಪ್ರಯತ್ನ ನಡೆದಿದ್ದರೂ, ಕಾರಿನಲ್ಲಿದ್ದ ಬ್ಲೀಚಿಂಗ್ ಪೌಡರ್ನ ವಾಸನೆ, ನೈಲಾನ್ ಹಗ್ಗ ಹಾಗೂ ಮೃತದೇಹ ಸಾಗಿಸಲು ಬಳಸಲಾಗಿದೆ ಎನ್ನಲಾದ ವಾಹನವೇ ತನಿಖೆಯನ್ನು ಮತ್ತೆ ಮನೆಯತ್ತ ಕರೆದೊಯ್ದಿತ್ತು. ಪ್ರಕರಣದ ತನಿಖೆಯಲ್ಲಿ ಈ ಸಾಕ್ಷ್ಯಗಳು ಪ್ರಮುಖವಾಗಿದ್ದವು.








