ಕುಟುಂಬದ ಮಾನಕ್ಕೆ ಧಕ್ಕೆ ತಂದಿದ್ದಾಳೆ ಎಂಬ ಆರೋಪದ ಹಿನ್ನೆಲೆಯಲ್ಲಿ, ತಂದೆಯ ಸೂಚನೆಯ ಮೇರೆಗೆ ಟೆಕ್ಕಿ ಪ್ರಿಯಕರನೇ ಯುವತಿಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಗೋದಾವರಿಖನಿಯ ನಿವಾಸಿ 33 ವರ್ಷದ ಅಂಕತಿ ಮಾನಸಾ ಎಂದು ಗುರುತಿಸಲಾಗಿದೆ.
ಆಗಸ್ಟ್ 20ರಂದು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಕಾರಿನ ಡಿಕ್ಕಿ ತೆರೆದಾಗ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಾರಂಗಲ್ನ ಮಹಾತ್ಮ ಗಾಂಧಿ ಮೆಮೋರಿಯಲ್ಆಸ್ಪತ್ರೆಗೆ ಕಳುಹಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮಾನಸಾ ತನ್ನ ಬಾಲ್ಯದ ಸ್ನೇಹಿತನಾದ ವಿನೋದ್ ಜೊತೆ ಸಂಬಂಧ ಹೊಂದಿದ್ದಳು. ಆಕೆಗೆ ಈ ಹಿಂದೆ ಎರಡು ಮದುವೆಗಳಾಗಿದ್ದು, ಎರಡೂ ವಿಚ್ಛೇದನದಲ್ಲಿ ಅಂತ್ಯಗೊಂಡಿದ್ದವು.
ಆಗಸ್ಟ್ 17ರಂದು ಮಾನಸಾ ಕರೀಂನಗರದಲ್ಲಿರುವ ವಿನೋದ್ನ ಬಾಡಿಗೆ ಕೊಠಡಿಗೆ ತೆರಳಿದ್ದಳು. ಅಲ್ಲಿ ವಿನೋದ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ ಎನ್ನಲಾಗಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ವಿನೋದ್ ಮಾನಸಾಳ ತಂದೆ ರಾಜೇಶಂ ಅವರಿಗೆ ಕರೆ ಮಾಡಿ ನಡೆದ ವಿಚಾರವನ್ನು ತಿಳಿಸಿದ್ದಾನೆ.
ಮಗಳ ವರ್ತನೆಯಿಂದ ಕುಟುಂಬದ ಮಾನಕ್ಕೆ ಧಕ್ಕೆ ಉಂಟಾಗಿದೆ ಎಂದು ಕೋಪಗೊಂಡ ರಾಜೇಶಂ, ವಿನೋದ್ಗೆ ಆಕೆಯೊಂದಿಗೆ ಜಗಳವಾಡಿ ಕೊಲೆ ಮಾಡುವಂತೆ ಸೂಚಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ, ನಂತರ ವಿನೋದ್ ಮಾನಸಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ಕಾರಿನ ಡಿಕ್ಕಿಯಲ್ಲಿ ಇರಿಸಿ, ಎಲ್ಕತುರ್ತಿಗೆ ತೆರಳಿ ನಿರ್ಜನ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿದ್ದಾನೆ. ಮೃತದೇಹವನ್ನು ಅಲ್ಲೇ ಬಿಸಾಡಲು ಆತ ಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ವಿನೋದ್ ಮೊದಲು ಮಾನಸಾ ತನ್ನ ಕೊಠಡಿಯಲ್ಲಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ ಹಾಗೂ ಭಯದಿಂದ ಮೃತದೇಹವನ್ನು ಹೊರಗೆ ಸಾಗಿಸಿದ್ದಾಗಿ ಹೇಳಿದ್ದನು. ಆದರೆ ಹೆಚ್ಚಿನ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ತನ್ನ ಮೇಲೆ ಮಾನಸಾಳ ತಂದೆ ಕೊಲೆಗೆ ಒತ್ತಡ ಹೇರಿದ್ದನೆಂದು ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯನ್ನು ಬಂಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.








