ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ದಸರಾ ಗಜಪಯಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಹುಣಸೂರಿನ ವೀರನಹೊಸಳ್ಳಿಯಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದ ಮೂಲಕ ದಸರಾ ಗಜಪಡೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಗಜಪಯಣಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10ರಿಂದ 10.28ರ ಶುಭ ತುಲಾ ಲಗ್ನದಲ್ಲಿ ದಸರಾ ಆನೆಗಳಿಗೆ ಪೂಜೆ ಸಲ್ಲಿಸಿ, ಫಲತಾಂಬೂಲ ನೀಡುವ ಮೂಲಕ ಗಜಪಡೆಗೆ ಚಾಲನೆ ನೀಡಲಾಗುತ್ತದೆ.
ಮೊದಲ ಹಂತದಲ್ಲಿ ಒಟ್ಟು 9 ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ. ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ ಹಾಗೂ ಕಾವೇರಿ ಆನೆಗಳು ಮೊದಲ ಹಂತದ ಗಜಪಡೆಯಲ್ಲಿ ಇರಲಿವೆ. ಪೂಜೆ ನೆರವೇರಿದ ಬಳಿಕ ಆನೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಲಿವೆ.
ಗಜಪಯಣ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಅಭಿಮನ್ಯುವಿಗೆ ಬೀಳ್ಕೊಡುಗೆ
ಈ ಬಾರಿಯ ಗಜಪಯಣ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಲಿದೆ. ಸತತ 6 ಬಾರಿ ಭಾರೀ ಚಿನ್ನದ ಅಂಬಾರಿ ಹೊತ್ತಿರುವ ಕ್ಯಾಪ್ಟನ್ ಅಭಿಮನ್ಯುವಿಗೆಅರಣ್ಯ ಇಲಾಖೆ ಬೀಳ್ಕೊಡುಗೆ ನೀಡಲಿದೆ.
ಅರಣ್ಯ ಇಲಾಖೆಯ ಅಚ್ಚುಮೆಚ್ಚಿನ ಆನೆಯಾಗಿರುವ ಅಭಿಮನ್ಯುವಿಗೆ ಬೀಳ್ಕೊಡುಗೆ ನೀಡಬೇಕೆಂದು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಗಜಪಯಣದ ಸಂದರ್ಭದಲ್ಲೇ ಅಭಿಮನ್ಯುವಿಗೆ ಗೌರವಪೂರ್ವಕ ಬೀಳ್ಕೊಡುಗೆ ನೀಡಲು ನಿರ್ಧರಿಸಲಾಗಿದೆ.








