ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಮೃತಪಟ್ಟಿದ್ದಾನೆಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಆತ ಉಸಿರಾಡಿದ್ದು, ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಕೃತ್ತು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತಾಲೂಕಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ನಿವಾಸಿ ರಜತ್(30) ತೀವ್ರ ಅಸೌಖ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಮಂಗಳೂರಿನ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಯುವಕನನ್ನು ಮನೆಗೆ ಕರೆದೊಯ್ಯುವಂತೆ ವೈದ್ಯರು ಬುಧವಾರ ತಿಳಿಸಿದ್ದರು. ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದು, ತೆಗೆದರೆ ಉಸಿರು ನಿಂತು ಅಸುನೀಗುತ್ತಾರೆ ಎಂದು ತಿಳಿಸಿದ್ದರು.
ಯುವಕನ ಸಹೋದರಿ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಯುವಕನನ್ನು ವೆಂಟಿಲೇಟರ್ ಸಹಿತ ಮನೆಗೆ ಕರೆತರಲಾಗಿತ್ತು. ವೆಂಟಿಲೇಟರ್ ತೆರವುಗೊಳಿಸಿ ಆಸ್ಪತ್ರೆ ಸಿಬ್ಬಂದಿ ಮರಳಿದ್ದರು. ಆದರೆ ವೆಂಟಿಲೇಟರ್ ತೆರವುಗೊಳಿಸಿದ ಎರಡು ತಾಸು ಬಳಿಕವೂ ಯುವಕ ಉಸಿರಾಡುತ್ತಿದ್ದರಿಂದ ಮನೆಯವರು ಸಂಜೆ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ನಡುವೆ ಯುವಕ ಮೃತಪಟ್ಟಿರುವುದಾಗಿ ಸುದ್ದಿ ಹಬ್ಬಿ ಕುಟುಂಬಸ್ಥರು, ಬಂಧುಗಳು ಅಂತ್ಯಕ್ರಿಯೆಗೆ ಬೇಕಾದ ಸಾಮಗ್ರಿಗಳೊಂದಿಗೆ ಅಂತಿಮ ದರ್ಶನಕ್ಕೆ ಮನೆಗೆ ಬಂದಿದ್ದರು. ಅಂತ್ಯಸಂಸ್ಕಾರಕ್ಕೆ ರುದ್ರಭೂಮಿಯಲ್ಲಿ ಸಿದ್ಧತೆಯನ್ನೂ ನಡೆಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಯುವಕ ಇನ್ನಿಲ್ಲವೆಂದು ಭಾವಚಿತ್ರ ಸಹಿತ ಸಂದೇಶ ಹಾಕಲಾಗಿತ್ತು.
ಕುಡಿತದ ಚಟ:
ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ರಜತ್ ಅವಿವಾಹಿತನಾಗಿದ್ದು, ಕುಡಿತದ ಚಟ ಅಂಟಿಸಿಕೊಂಡಿದ್ದ. ವಿಪರೀತ ಕುಡಿತದಿಂದಾಗಿ ಈ ಹಿಂದೆಯೂ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿ ಪ್ರಾಣಾಪಾಯದಿಂದ ಪಾರಾಗಿದ್ದ.








