ಬೆಂಗಳೂರು : ಅಣ್ಣನ ಪ್ರೇಮ ಪ್ರಸ್ತಾಪವನ್ನು ತಳ್ಳಿಹಾಕಿದ ಕಾರಣಕ್ಕೆ ಆತನ ಸಹೋದರನೇ ಯುವತಿಯೊಬ್ಬಳಿಗೆ ಸಾರ್ವಜನಿಕ ರಸ್ತೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಇಲ್ಲಿನ ಕೋಡಿಹಳ್ಳಿಯ ಹೆಚ್ಎಎಲ್ ರಸ್ತೆಯಲ್ಲಿ ಸಂಭವಿಸಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಕಾನೂನು ವಿದ್ಯಾರ್ಥಿನಿ ಅಮೃತಾ (21) ಚಿಕಿತ್ಸೆ ಫಲಿಸದೇ ಬುಧವಾರ (ಜುಲೈ 15) ಸಂಜೆ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸೂರ್ಯ ಹಾಗೂ ಆತನ ಅಣ್ಣ ಧನುಷ್ನನ್ನು ಜೀವನ್ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಓಂ ಶಕ್ತಿ ಮಾಲೆ ಹಾಕುವ ಧಾರ್ಮಿಕ ಕಾರ್ಯಕ್ರಮದ ವೇಳೆ ಮೃತ ಅಮೃತಾ ಹಾಗೂ ಧನುಷ್ ಕುಟುಂಬಗಳ ನಡುವೆ ಪರಿಚಯವಾಗಿತ್ತು. ಇದು ಇಬ್ಬರ ನಡುವೆ ಆತ್ಮೀಯ ಪ್ರೀತಿಯಾಗಿ ಬದಲಾಗಿತ್ತು. ಆದರೆ, ಧನುಷ್ ತನಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿರುವ ಮತ್ತು ತನಗೊಂದು ಮಗು ಇರುವ ಸತ್ಯವನ್ನು ಅಮೃತಾಳಿಂದ ಮುಚ್ಚಿಟ್ಟಿದ್ದನು. ಇತ್ತೀಚೆಗೆ ಈ ವಂಚನೆಯ ವಿಚಾರ ಅಮೃತಾಳಿಗೆ ತಿಳಿಯುತ್ತಿದ್ದಂತೆಯೇ ಆಕೆ ಆತನಿಂದ ಸಂಪೂರ್ಣವಾಗಿ ದೂರವಾಗಿದ್ದಳು ಹಾಗೂ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಳು.
ತನ್ನ ಅಣ್ಣನ ಪ್ರೀತಿಯನ್ನು ನಿರಾಕರಿಸಿದ ಅಮೃತಾಳನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಧನುಷ್ನ ತಮ್ಮ ಸೂರ್ಯ ಸಂಚು ಹೂಡಿದ್ದನು. ಅದರಂತೆ ಜುಲೈ 13 ರಂದು ಕೋಡಿಹಳ್ಳಿಯಲ್ಲಿರುವ ಯುವತಿಯ ಮನೆಯ ಬಳಿ ತೆರಳಿದ ಸೂರ್ಯ, ಅಮೃತಾಳೊಂದಿಗೆ ತೀವ್ರ ಗಲಾಟೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದಾಗ ಏಕಾಏಕಿ ತಾನು ತಂದಿದ್ದ ಚಾಕುವಿನಿಂದ ಅಮೃತಾಳ ಬೆನ್ನು ಹಾಗೂ ಎದೆಗೆ ಮನಬಂದಂತೆ ಇರಿದು ಪರಾರಿಯಾಗಿದ್ದನು.
ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ ಯುವತಿಯನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ಗಾಯದಿಂದಾಗಿ ಆಕೆ ಬುಧವಾರ ಸಂಜೆ ಕೊನೆಯುಸಿರೆಳೆದಿದ್ದಾಳೆ. ಮೃತ ಅಮೃತಾ ಕಾನೂನು ವ್ಯಾಸಂಗ ಮಾಡುತ್ತಾ, ಪಾರ್ಟ್ ಟೈಮ್ ಆಗಿ ಪಿಜ್ಜಾ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಜೀವನ್ಭೀಮಾನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.








